Headlines

ಶಿವಮೊಗ್ಗ : ಒಂದು ವರ್ಷದ ಬಳಿಕ ಶಿಕಾರಿಪುರ ಬಾಲಕಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್.! ಶವ ಸೂಟ್‌ಕೇಸ್‌ಲ್ಲಿಟ್ಟು ಪ್ರಪಾತಕ್ಕೆ ಹಾಕಿದ ಪಿಜಿ ಮಾಲಿಕ & ಗ್ಯಾಂಗ್.!

ಅಶ್ವಸೂರ್ಯ/ಶಿವಮೊಗ್ಗ : ಶಿಕಾರಿಪುರದಲ್ಲಿ ಒಂದು ವರ್ಷದ ಹಿಂದೆ ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕಿ ಅಂದು ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂಬ ಸತ್ಯ ಪೊಲೀಸರ ದಕ್ಷ ತನಿಖೆಯಿಂದ ಬಯಲಾಗಿದೆ.! ಪಿಜಿಗೆ ಕೆಟ್ಟ ಹೆಸರು ಬರುತ್ತದೆಂಬ ಭಯದಿಂದ,ಪಿಜಿಯ ಮಾಲೀಕರು ಆಕೆಯ ಶವವನ್ನು ಸೂಟ್‌ಕೇಸ್‌ನಲ್ಲಿ ಹಾಕಿ ಪ್ರಪಾತಕ್ಕೆ ಎಸೆದಿದ್ದರಂತೆ.!?
ಅಪ್ರಾಪ್ತ ಬಾಲಕಿ ಕಾಣೆಯಾದ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಬೆಚ್ಚಿಬೀಳಿಸುವ ಸತ್ಯಾಂಶ ಬೆಳಕಿಗೆ ಬಂದಿದ್ದು ಪಿಜಿಯಲ್ಲಿ ಕೆಲಸಕ್ಕಿದ್ದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಾಗ, ಅದರಿಂದ ತಮಗೆ ತಮ್ಮ ಪಿಜಿಗೆ ಕೆಟ್ಟ ಹೆಸರು ಬರುತ್ತದೆ ಎಂಬ ಭಯದಿಂದ ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿ ಪ್ರಪಾತಕ್ಕೆ ಎಸೆದು ಬಂದಿದ್ದ ಕರಾಳ ಕಥೆ ಈಗ ಬರೋಬ್ಬರಿ ಒಂದು ವರ್ಷದ ಬಳಿಕ ಬೆಳಕಿಗೆ ಬಂದಿದೆ. ಅಷ್ಟಕ್ಕೂ ಆ ನಿಗೂಢ ಪ್ರಕರಣ ಈಗ ತಿರುವು ಪಡೆದುಕೊಂಡಿದ್ದು ಹೇಗೆ ಎನ್ನುವುದು ಮಾತ್ರ ಕುತೂಹಲಕಾರಿಯಾಗಿದೆ.!

ಈ ನಾಪತ್ತೆ ಪ್ರಕರಣದ ಸಾಕ್ಷಿ ನಾಶ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಶಿಕಾರಿಪುರ ತಾಲೂಕಿನ ಇಟ್ಟಿಗೆಹಳ್ಳಿಯ ಬಿಜೆಪಿ ಮುಖಂಡ ಹಾಗೂ ಬಂಜಾರ ಸಮಾಜದ ತಾಲೂಕು ಅಧ್ಯಕ್ಷ ಗಂಗಾನಾಯ್ಕ, ಆತನ ಎರಡನೇ ಪತ್ನಿ ಸೌಭಾಗ್ಯ ಅಲಿಯಾಸ್ ಭಾಗ್ಯಶ್ರೀ, ಸೋಗಿಲು ಗ್ರಾಮದ ರಂಜಿತಾ ಮತ್ತು ಪೀರ್ಯಾನಾಯ್ಕ ಎಂಬ ನಾಲ್ವರನ್ನು ಈಗ ಪೊಲೀಸರು ಹೆಡೆಮುರಿ ಕಟ್ಟಿ ಕಂಬಿಯ ಹಿಂದೆ ಬಿಟ್ಟಿದ್ದಾರೆ. ಬಂಧಿತ ಗಂಗಾನಾಯ್ಕ ಮುದ್ದನಹಳ್ಳಿ ಗ್ರಾಮ ಪಂಚಾಯ್ತಿಯ ಮಾಜಿ ಅಧ್ಯಕ್ಷನೂ ಆಗಿದ್ದಾನೆ.
ಮೃತಪಟ್ಟ ಅಪ್ರಾಪ್ತ ಬಾಲಕಿ ಸಂಗೀತಾಗೆ ತಾಯಿ ಇರಲಿಲ್ಲ. ತಂದೆಯ ಜೊತೆ ಇರಲಾರದೆ ಆಕೆ ಕೆಲಸ ಹುಡುಕಿಕೊಂಡು ಶಿಕಾರಿಪುರಕ್ಕೆ ಬಂದು ಸೇರಿದ್ದಳು. ಪಿಜಿ ಮಾಲೀಕತ್ವ ವಹಿಸಿಕೊಂಡಿದ್ದ ಸೌಭಾಗ್ಯ, ಈ ಬಾಲಕಿಯನ್ನು ತನ್ನ ಮಗಳಂತೆ ಸಾಕಿ ಸಲುಹುತ್ತಿದ್ದಳು. 8ನೇ ತರಗತಿಯ ನಂತರ ಓದು ನಿಲ್ಲಿಸಿದ್ದ ಸಂಗೀತಾ, ಅದೇ ಪಿಜಿಯಲ್ಲಿ ಕೆಲಸ ಮಾಡಿಕೊಂಡಿದ್ದಳು.
2025 ರ ಮೇ 18 ರಂದು ಪಿಜಿಯಲ್ಲಿದ್ದ ರಂಜಿತಾ ಎಂಬಾಕೆಯೊಂದಿಗೆ ಬಾಲಕಿ ಸಂಗೀತಾಗೆ ಜಗಳವಾಗಿತ್ತು. ಬಾಲಕಿ ಸಂಗೀತಾ ಎಲ್ಲರ ಹತ್ತಿರ ಒಬ್ಬರ ಮೇಲೊಬ್ಬರು ಚಾಡಿ ಹೇಳುತ್ತಿದ್ದಾಳೆ ಎಂದು ಆರೋಪಿಗಳು ಆಕ್ಷೇಪಿಸಿದ್ದರು. ಪಿಜಿ ಕೆಳಗಿರುವ ಬ್ಯೂಟಿ ಪಾರ್ಲರ್‌ನಲ್ಲಿ ಬಾಲಕಿಯನ್ನು ಕರೆಸಿ, “ಚಾಡಿ ಹೇಳಿ ನಮ್ಮ ಮರ್ಯಾದೆ ತೆಗೆಯುತ್ತಿದ್ದೀಯಾ” ಎಂದು ತೀವ್ರವಾಗಿ ಹೆದರಿಸಿ, ನಿಂದಿಸಿ ಮಾನಸಿಕ ಮತ್ತು ದೈಹಿಕವಾಗಿ ಹಲ್ಲೆ ನಡೆಸಲಾಗಿತ್ತು.

ಇದರಿಂದ ತೀವ್ರ ಮನನೊಂದ ಬಾಲಕಿ ಸಂಗೀತ, ಪಿಜಿಯ ಕೊಠಡಿಯೊಂದಕ್ಕೆ ತೆರಳಿ ನೇಣಿಗೆ ಕೊರಳೊಡ್ಡಿದ್ದಳಂತೆ.!
ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಕಂಡು ಪಿಜಿ ಮಾಲೀಕರು ಮತ್ತು ಅವರ ಸ್ನೇಹಿತರು ಗಾಬರಿಯಾಗಿದ್ದಾರೆ. ಪೊಲೀಸರಿಗೆ ವಿಷಯ ತಿಳಿಸಿದರೆ ತಮ್ಮ ಪಿಜಿಗೆ ಕೆಟ್ಟ ಹೆಸರು ಬರುತ್ತದೆ ಹಾಗೂ ಕಾನೂನಿನ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದು ಹೆದರಿದ ನಾಲ್ವರು ಆರೋಪಿಗಳು ದೊಡ್ಡದೊಂದು ಪ್ಲ್ಯಾನ್ ರೂಪಿಸಿದ್ದಾರೆ. ಇದಕ್ಕಾಗಿ ಬಾಲಕಿಯ ಶವವನ್ನು ಯಾರಿಗೂ ತಿಳಿಯದಂತೆ ಗೌಪ್ಯವಾಗಿ ವಿಲೇವಾರಿ ಮಾಡಲು ನಿರ್ಧರಿಸಿದ್ದಾರೆ, ಮೃತದೇಹವನ್ನು ತಂದು ಒಂದು ದೊಡ್ಡ ಸೂಟ್‌ಕೇಸ್ ಒಳಗೆ ಹಾಕಿ ಯಾರ ಗಮನಕ್ಕೂ ಬಾರದ ಹಾಗೆ ಮುಚ್ಚಿದ್ದಾರೆ.ಬಳಿಕ ಬಾಲಕಿಯ ಶವವಿದ್ದ ಸೂಟ್‌ಕೇಸ್ ಅನ್ನು ಕಾರಿನಲ್ಲಿ ಇಟ್ಟುಕೊಂಡು, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಮಾವಿನಗುಂಡಿ (ಜೋಗ ಜಲಪಾತದ ಸಮೀಪ) ಪ್ರಪಾತದ ಅಜ್ಞಾತ ಸ್ಥಳಕ್ಕೆ ತೆರಳಿ ಎಸೆದು ಯಾರಿಗೂ ತಿಳಿಯದಂತೆ ವಾಪಸ್ ಬಂದಿದ್ದರು ಆರೋಪಿಗಳು.? ಈ ಘಟನೆ ನಡೆದು ಒಂದು ವರ್ಷದವರೆಗೂ ಬಾಲಕಿ ಜೀವಂತವಾಗಿದ್ದಾಳೆ ಎಂದು ನಂಬಿಸಲು ಆಕೆಯ ಮೊಬೈಲ್ ಫೋನ್ ಅನ್ನು ಯಾರಿಗೂ ಸಿಗದಂತೆ ಬಚ್ಚಿಟ್ಟಿದ್ದರು.

ಕಳೆದ ಒಂದು ವರ್ಷದಿಂದ ಯಾರಿಗೂ ತಿಳಿಯದ ಈ ರಹಸ್ಯ, ಇತ್ತೀಚೆಗೆ ಆರೋಪಿಗಳಾದ ರಂಜಿತಾ ಹಾಗೂ ಪೀರ್ಯಾನಾಯ್ಕ ನಡುವೆ ನಡೆದ ವೈಯಕ್ತಿಕ ಜಗಳದಿಂದಾಗಿ ಬೀದಿಗೆ ಬಂದಿತ್ತು. ಜಗಳದ ವೇಳೆ ಈ ಕೊಲೆಯ ಸತ್ಯಾಂಶ ಹೊರಬೀಳುತ್ತಿದ್ದಂತೆ, ಕಳೆದ ಶುಕ್ರವಾರ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬಾಲಕಿ ನಾಪತ್ತೆಯಾಗಿರುವ ಬಗ್ಗೆ ಅಧಿಕೃತವಾಗಿ ಮಿಸ್ಸಿಂಗ್ ಕೇಸ್ ದಾಖಲಾಗಿತ್ತು. ಪೊಲೀಸರು ತನಿಖೆ ನಡೆಸಿ ಕೊನೆಯದಾಗಿ ಬಾಲಕಿ ಮಾತನಾಡಿದ್ದ ರಂಜಿತಾಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ, ಆಕೆ ಅಸಲಿ ಸತ್ಯವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾಳೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದ ನಾಲ್ವರು ಆರೋಪಿಗಳನ್ನು ಬಂಧಿಸಿ ತನಿಖೆಗೆ ಒಳಪಡಿಸಿದ್ದಾರೆ.

ಈ ಕುರಿತು ಶಿವಮೊಗ್ಗದಲ್ಲಿ ಅಧಿಕೃತ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿರುವ ಜಿಲ್ಲಾ ರಕ್ಷಣಾಧಿಕಾರಿ (SP) ನಿಖಿಲ್ ಅವರು, ” ಆತ್ಮಹತ್ಯೆ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದರೆ ಇಷ್ಟು ದೊಡ್ಡ ಕ್ರಿಮಿನಲ್ ಕೇಸ್ ಆಗುತ್ತಿರಲಿಲ್ಲ. ಶವ ವಿಲೇವಾರಿ ಮಾಡಿ ಮುಚ್ಚಿಟ್ಟಿರುವುದು ತನಿಖೆಯಲ್ಲಿ ಸಾಬೀತಾಗಿದೆ. ಮಾವಿನಗುಂಡಿ ಪ್ರಪಾತದಲ್ಲಿ ಶೋಧ ನಡೆಸಿದಾಗ ಬಾಲಕಿಯ ಶವದ ಕೆಲವು ಭಾಗಗಳು (ಅಸ್ಥಿಪಂಜರದ ಅವಶೇಷಗಳು) ನಮಗೆ ಪತ್ತೆಯಾಗಿವೆ. ಅವು ಬಾಲಕಿಯದ್ದೇ ಎಂದು ದೃಢಪಡಿಸಿಕೊಳ್ಳಲು ತಕ್ಷಣವೇ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!