
ಕುಂದಾಪುರ : ಬಸ್ ನಿರ್ವಾಹಕರ ಮಗ ರಾಜ್ಯಕ್ಕೆ ಟಾಪರ್; ತನ್ನ ಸಾಧನೆ ಬಗ್ಗೆ ಪ್ರೀತಮ್ ಏನಂದ್ರು.?
news.ashwasurya.in
ಅಶ್ವಸೂರ್ಯ/ಉಡುಪಿ : ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಉಡುಪಿ ಜಿಲ್ಲೆಯಲ್ಲಿ ಬಸ್ ಕಂಡೆಕ್ಟರ್ ಪುತ್ರ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗುವ ಮೂಲಕ ಸಾಧನೆ ಮಾಡಿದ್ದಾರೆ. ಕುಂದಾಪುರ ತಾಲೂಕಿನ ಶಂಕರನಾರಾಯಣ ಮದರ್ ಥೆರೆಸಾ ಮೆಮೋರಿಯಲ್ ಪ್ರೌಢಶಾಲೆಯ ವಿದ್ಯಾರ್ಥಿ ಪ್ರೀತಮ್ ಜಿ. ಪೂಜಾರಿ 625 ಅಂಕಗಳಿಗೆ 625 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಟಾಪರ್ ಆಗಿದ್ದಾರೆ.
ಪ್ರೀತಮ್ ಓದಿರೋ ಶಾಲೆಯಲ್ಲಂತೂ ಸಂಭ್ರಮವೋ ಸಂಭ್ರಮ. ವಿದ್ಯಾರ್ಥಿಗಳು ಶಿಕ್ಷಕರ ಜೊತೆಗೂಡಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಹಾರ ಹಾಕಿ, ಬ್ಯಾಂಡು ವಾದ್ಯದೊಂದಿಗೆ ಪ್ರೀತಮ್ರನ್ನು ಸ್ವಾಗತಿಸಲಾಯಿತು.
ಪ್ರೀತಮ್ ಕುಂದಾಪುರ ತಾಲೂಕಿನ ಬಿದ್ಕಲ್ಕಟ್ಟೆ ನಿವಾಸಿ ಗಣಪತಿ ಪೂಜಾರಿ-ನಾಗರತ್ನಾ ದಂಪತಿಯ ಇಬ್ಬರ ಮಕ್ಕಳ ಪೈಕಿ ಹಿರಿಯ ಪುತ್ರ. ತಂದೆ ಗಣಪತಿ ಅವರು ಶ್ರೀ ಲಕ್ಷ್ಮೀ ಎಕ್ಸ್ ಪ್ರೆಸ್ ಖಾಸಗಿ ಬಸ್ಸಿನಲ್ಲಿ ಕಂಡಕ್ಟರ್. ತಾಯಿ ನಾಗರತ್ನಾ ಗೃಹಿಣಿ.

ಟಾಪರ್ ಪ್ರೀತಮ್ ಏನಂದ್ರು?
ತನ್ನ ಸಾಧನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರೀತಮ್, ಟಾಪರ್ ಆಗುತ್ತೇನೆ ಅನ್ನೋ ಭರವಸೆ ಇತ್ತು. ಆದರೆ, 625 ಅಂಕ ನಿರೀಕ್ಷಿಸಿರಲಿಲ್ಲ. ಶಾಲೆಯ ಉತ್ತಮ ಪಾಠದಿಂದ ಇದು ನನಗೆ ಸಾಧ್ಯವಾಗಿದೆ. ಪಾಠವನ್ನು ಸರಿಯಾಗಿ ಕೇಳಿಸಿಕೊಂಡರೆ ಸಾಕು ಅಂಕ ಪಡೆಯಬಹುದು. ನಾನು ಯಾವುದೇ ಒತ್ತಡಕ್ಕೆ ಒಳಗಾಗಿಲ್ಲ. ನನ್ನ ಹ್ಯಾಂಡ್ ರೈಟಿಂಗ್ ಚೆನ್ನಾಗಿರಲಿಲ್ಲ. ಹಾಗಾಗಿ ಉತ್ತಮ ಅಂಕ ತಪ್ಪಬಹುದು ಅನ್ನೋ ಆತಂಕ ಇತ್ತು ಎಂದು ಪ್ರೀತಂ ತನ್ನ ಅಂಕ ಗಳಿಕೆ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ. ಮುಂದೆ ಇಂಜಿನಿಯರಿಂಗ್ ಮಾಡುವ ಆಸೆ ಇದೆ ಎಂದರು.
ಅಮ್ಮ ನಾಗರತ್ನ ಪ್ರತಿಕ್ರಿಯೆ ನೀಡಿ, ಅವನು ಸಾಧನೆ ಮಾಡಬೇಕೆಂದು ನಮಗೆ ತುಂಬಾ ಆಸೆ ಇತ್ತು. ಚಿಕ್ಕಂದಿನಿಂದಲೂ ಸಾಧನೆ ಹಿಂದೆ ಶ್ರಮಿಸುತ್ತಿದ್ದ ಅದೀಗ ಸಾಕಾರ ಆಗಿದೆ. ಆತ ಐಎಎಸ್ ಮಾಡ್ಬೇಕು ಅಂತಾ ಆಸೆ ಇದೆ ಎಂದರು.


